Monday, November 5, 2012

ಅಂಕಮರ್ಮ (Sun Tzu's Art of War) - ೧

ತಳಪಾಯ
೧. ಸುನ್ ಜ಼ಿ ಹೇಳುವರು: ಅಂಕಮರ್ಮವು ನಾಡಿಗೆ ಗುರುತರವಾದದ್ದು.

೨. ಇದು ಸಾವು-ಬದುಕಿನ ಪ್ರಶ್ನೆ, ಉಳಿವಿನ ಇಲ್ಲಾ ಅಳಿವಿನ ದಾರಿ. ಆದುದರಿಂದ ಈ ಪರಿಶೀಲನಾ ವಿಷಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ.

೩. ಹಾಗಾಗಿ, ಐದು ಸ್ಥಾಯಿಗಳಿಂದ ಪರಿಪಾಲಿಸಲ್ಪಟ್ಟ ಈ ಅಂಕಮರ್ಮವನ್ನು, ಕಣದ ಹದವನ್ನು ಅಂದಾಜಿಸುವ ಹವಣಿಕೆಗಳಲ್ಲಿ ಗಮನದಲಿಟ್ಟಿರಬೇಕು.

೪. ಈ ಸ್ಥಾಯಿಗಳೆಂದರೆ, ೧. ನೈತಿಕ ಧರ್ಮ ೨. ಕಾಡು ೩. ನಾಡು ೪. ಮನ್ನೆಯ  ೫. ಕ್ರಮ ಮತ್ತು ಶಿಸ್ತು

೫,೬. ನೈತಿಕ ಧರ್ಮವು, ಬದುಕಿನ ಪರಿವಿಲ್ಲದೆ, ಯಾವುದೇ ಅಂಜಿಕೆಯ ಅಳುಕಿಲ್ಲದೆ, ಪ್ರಜೆಗಳು ತಮ್ಮ ಅರಸನಿಗೆ ಸಂಪೂರ್ಣವಾಗಿ ಬದ್ಧರಾಗಿರುವಂತೆ ಕಾಯ್ದುಕೊಳ್ಳುತ್ತದೆ.

೭. ಕಾಡು, ಹಗಲು ಮತ್ತು ಇರುಳು, ಬೆಚ್ಚಗೆ ಮತ್ತು ತಂಪು, ಕಾಲಗಳು ಮತ್ತು ಋತುಗಳನ್ನು ಸೂಚಿಸುತ್ತದೆ.

೮. ನಾಡು, ದೊಡ್ಡ ಮತ್ತು ಸಣ್ಣ ಅಂತರಗಳನ್ನು, ಅಪಾಯ ಮತ್ತು ಅಭಯಗಳನ್ನು, ಬಯಲು ಮತ್ತು ಓಣಿಗಳನ್ನು, ಸಾವು ಮತ್ತು ಬಾಳಿನ ಸಾಧ್ಯತೆಗಳನ್ನು, ತುಂಬಿಕೊಂಡಿರುತ್ತದೆ.

೯. ಮನ್ನೆಯ, ವಿವೇಕ, ವಿಶ್ವಾಸ, ಇಂಬಿಕೆ, ಧೈರ್ಯ ಮತ್ತು ಕಡಾಖಂಡಿತವನ್ನು ಪ್ರತಿಬಿಂಬಿಸುತ್ತಾನೆ.

೧೦. ಕ್ರಮ ಮತ್ತು ಶಿಸ್ತುಗಳು, ಸೈನ್ಯವನ್ನು ತಕ್ಕ ಉಪವಿಭಾಗಗಳಾಗಿ ಸಂಗಟಿಸುವಲ್ಲಿ, ಸೇನಾನಾಯಕರ ದರ್ಜೆಗಳನ್ನು ನಿರ್ಧರಿಸುವಲ್ಲಿ, ಪಡೆಗೆ ಸಾಮಾನು ಸರಬರಾಜು ಮಾಡುವ ದಾರಿಗಳ ಉಸ್ತುವಾರಿಯಲ್ಲಿ, ಮನವರಿಕೆಯಾಗುತ್ತವೆ.

೧೧. ಈ ಐದು ತಲೆಗಳು ಪ್ರತಿ ದಂಡನಾಯಕನಿಗೆ ತಿಳಿದಿರಬೇಕು. ಅರಿತವನು ಗೆಲುವನ್ನು ಹೊಂದುತ್ತಾನೆ; ಅರಿಯದೇ ಹೋದವನು ಸೋಲನ್ನು ಅನುಭವಿಸುತ್ತಾನೆ.

೧೨. ಆದುದರಿಂದ, ಕಣದ ಹದವನ್ನು ಅಂದಾಜಿಸುವ ನಿಮ್ಮ ಹವಣಿಕೆಗಳಲ್ಲಿ, ಇವು ನಿಮ್ಮ ಹೋಲಿಕೆಗಳಿಗೆ ಈ ರೀತಿ ಆಧಾರವಾಗಿರಲಿ;

೧೩.
(೧). ಈ ಅರಸರೀರ್ವರಲ್ಲಿ ಯಾರು ನೈತಿಕ ಧರ್ಮವನ್ನು ಪ್ರಚೋದಿಸುತ್ತಾನೆ?

(೨). ಈ ದಂಡನಾಯಕರೀರ್ವರಲ್ಲಿ ಯಾರು ಜಾಣರು?

(೩). ಯಾರಲ್ಲಿ ಕಾಡು ಮತ್ತು  ನಾಡುಗಳ ಅನುಕೂಲತೆ ಸೇರಿಕೊಂಡಿದೆ?

(೪). ಯಾವ ಕಡೆಯಲ್ಲಿ ಶಿಸ್ತನ್ನು ಕಡುವಾಗಿ ಹೇರಿದ್ದಾರೆ?

(೫). ಯಾವ ಪಡೆ ಪ್ರಬಲವಾಗಿದೆ?

(೬). ಯಾವ ಕಡೆಯಲ್ಲಿ ನಾಯಕರು ಮತ್ತು ಕಾಲಾಳುಗಳು ಕಠಿಣ ತರಬೇತಿ ಪಡೆದಿದ್ದಾರೆ?

(೭). ಯಾವ ಪಡೆಯಲ್ಲಿ ದಂಡನೆ ಮತ್ತು ಮಂಡನೆಗಳು ಸ್ಥಿರ ಖಚಿತವಾಗಿರುತ್ತವೆ?

೧೪. ಈ ಏಳು ಗಮನಗಳಿಂದ ನಾನು ಗೆಲುವು ಇಲ್ಲಾ ಸೋಲನ್ನು ಮುಂಚೂಣಿಯಲ್ಲೇ ಹೇಳಬಲ್ಲೆ.

೧೫. ನನ್ನ ಸೊಲ್ಲನ್ನು ಆಲಿಸಿ, ಅದರಂತೆ ನಡೆದುಕೊಳ್ಳುವ ದಂಡನಾಯಕನು ವಿಜಯೀಯಾಗುವನು: ಅಂತಹವನನ್ನೇ ನಿರಂತರವಾಗಿ ಕೆಲಸದಲ್ಲಿರಸಬೇಕು! ನಿರ್ಲಕ್ಷಿಸುವವನು ಕೆಲಸ ಕಳೆದುಕೊಳ್ಳಬೇಕು!

೧೬. ನಾನು ಹೇಳಿದ ಹಿತನುಡಿಗಳನ್ನುಪಾಲಿಸುವುದರೊಂದಿಗೆ, ಈವರೆಗೆ ಹೇಳಿದ ನಿಯಮಗಳ ಹೊರತಾಗಿ ಸಹಾಯಕವಾಗುವ ಬೇರೆ ಪರಿಸ್ಥಿತಿಗಳಿದ್ದರೆ ಅವನ್ನೂ ಬಳಸಿಕೊಳ್ಳಿ.

೧೭. ಪರಿಸ್ಥಿತಿಗಳಿಗೆ ತಕ್ಕಂತೆ ಯೋಜನೆಗಳನ್ನು ಬದಲಾಯಿಸಿ.

೧೮. ಎಲ್ಲಾ ಕಾಳಗಗಳು ಮೋಸವನ್ನು ಅವಲಂಬಿಸಿವೆ.

೧೯. ಅದಕ್ಕಾಗಿ, ಕದನಕ್ಕೆ ಸನ್ನದ್ಧರಾಗಿದ್ದರೂ, ಆಗಿರದಂತೆ ತೋರಿಸಬೇಕು; ನಮ್ಮ ಪಡೆಗಳನ್ನು ನಡೆಸುತ್ತಿದ್ದರೂ, ನಿಷ್ಕ್ರಿಯರಾಗಿರುವಂತೆ ಕಾಣಬೇಕು; ನಾವು ಸನಿಹದಲ್ಲಿದ್ದರೂ, ವೈರಿಗೆ ದೂರದಲ್ಲಿರುವಂತೆ ಗೋಚರಿಸಬೇಕು; ಮತ್ತು ದೂರದಲ್ಲಿದ್ದರೆ, ಹತ್ತಿರದಲ್ಲಿರುವ ನಂಬಿಕೆ ಹುಟ್ಟಿಸಬೇಕು.

೨೦. ವೈರಿಯನ್ನು ಸಿಕ್ಕಿಸಲು ಎರೆ ಹಾಕಿ. ಗೊಂದಲದ ಆಟವಾಡಿ, ಇಂತು ಅವನನ್ನು ಕಿವುಚಿ ಬಿಡಿ.

೨೧. ಅವನು ಎಲ್ಲ ಕಡೆಯಿಂದಲು ಸುರಕ್ಷಿತನಾಗಿದ್ದರೆ,  ಅವನಿಗಾಗಿ ಕಾದಿರಿ. ಅವನು ನಿಮಗಿಂತ ಗಟ್ಟಿಗನಾಗಿದ್ದರೆ, ಎದುರುಗೊಳ್ಳುವುದನ್ನುತಪ್ಪಿಸಿ.

೨೨. ನಿಮ್ಮ ಎದುರಾಳಿ ಮುಂಗೋಪಿಯಾಗಿದ್ದರೆ, ಕೆಣಕಲು ಯತ್ನಿಸಿ. ಅವನ ಸೊಕ್ಕೇರಿಸಲು ಜೊಳ್ಳಾಗಿ ಅಭಿನಯಿಸಿ.

೨೩. ಅವನು ವಿಶ್ರಾಮ ತೆಗೆದುಕೊಳ್ಳುತ್ತಿದ್ದರೆ, ಅವನನ್ನು ನಿರಂತರವಾಗಿ ಕದಡಿಸಿ. ಅವನ ಪಡೆಯ ಒಗ್ಗಟ್ಟನ್ನು ಒಡೆಯಿರಿ.

೨೪. ಅವನ ಏರ್ಪಾಡಿನ ಕೊರತೆಯಿದ್ದಲ್ಲಿ ಏರಿ ಹೋಗಿ, ಅವನು ನಿರೀಕ್ಷಿಸಿಲ್ಲದಲ್ಲಿ ಪ್ರತ್ಯಕ್ಷರಾಗಿ.

೨೫. ಗೆಲುವಿಗೆ ಸೊಪಾನವಾಗುವ ಈ ಅಂಕ ಗುಟ್ಟುಗಳನ್ನು ಯಾರಿಗೂ ಮೊದಲೇ ಬಿಟ್ಟುಕೊಡಬಾರದು.

೨೬. ಕಾಳಗದ ಮೊದಲೇ ಬಹಳಷ್ಟು ಲೆಕ್ಕಗಳನ್ನು ಮಾಡುವ ದಂಡನಾಯಕನು ಗೆಲ್ಲುತ್ತಾನೆ. ಸೋಲನ್ನನುಭವಿಸಿದವನು ಕೆಲವಷ್ಟೇ ಲೆಕ್ಕಗಳನ್ನು ಮಾಡಿರುತ್ತಾನೆ. ಹೆಚ್ಚು ಲೆಕ್ಕಗಳು ಗೆಲುವಿಗೆ ಹಾದಿ, ಕೆಲವು ಸೋಲಿಗೆ: ಇನ್ನೆಷ್ಟನ್ನುವುದು ಲೆಕ್ಕಕ್ಕಿಲ್ಲ! ಈ ವಿಚಾರಗಳಿಗೆ ಗಮನ ಕೊಟ್ಟು, ನಾನು ಯಾರು ಗೆಲುವರುಇಲ್ಲಾ ಸೋಲುವರು ಅನ್ನುವುದನ್ನು ಮುಂಚಿತವಾಗಿಯೇ ಹೇಳಬಲ್ಲೆ.

Source:
http://suntzusaid.com/book/1

No comments:

Post a Comment